ಬೆಂಗಳೂರು, ಡಿ.19: ಕರ್ನಾಟಕದ ವೇಗದ ಬೌಲರ್ ದಾವಣಗೆರೆ ಎಕ್ಸ್ ಪ್ರೆಸ್ ವಿನಯಕುಮಾರ್ ಗಾಯಗೊಂಡ ಕಾರಣ ಮುಂಬರುವ ಇಂಗ್ಲೆಂಡ್ ವಿರುದ್ಧದ ಟ್ವೆಂಟಿ-20 ಪಂದ್ಯದಿಂದ ಹೊರಗುಳಿಯಬೇಕಾಗಿದೆ. ವಿನಯ್ ಬದಲಿಗೆ ಪೀಣ್ಯ ಎಕ್ಸ್ ಪ್ರೆಸ್ ವೇಗಿ ಕನ್ನಡಿಗ ಅಭಿಮನ್ಯು ಮಿಥುನ್ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.
ರಣಜಿ ಕ್ರಿಕೆಟ್ನಲ್ಲಿ ವಿದರ್ಭ ವಿರುದ್ಧದ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿ ಗಾಯಗೊಂಡಿರುವ ವಿನಯಕುಮಾರ್ ಎರಡು ವಾರ ವಿಶ್ರಾಂತಿ ಅಗತ್ಯವಿದೆ. ವಿನಯ್ ಜಾಗಕ್ಕೆ ಮಿಥುನ್ರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ ಹೇಳಿದ್ದಾರೆ.
ಗಾಯಗೊಂಡ ವೇಗಿ ಎಲ್ ಬಾಲಾಜಿ ಬದಲಿಗೆ ತಂಡಕ್ಕೆ ಆಯ್ಕೆಯಾಗಿದ್ದ ವಿನಯ್ ಅವರು ಗಾಯಾಳುವಾಗಿದ್ದು ದುರದೃಷ್ಟ ಎನ್ನಬಹುದು.
ಆಂಡರ್ಸನ್, ಟ್ರಾಟ್ಗೆ ವಿಶ್ರಾಂತಿ: ಇಂಗ್ಲೆಂಡ್ ತಂಡ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಜೇಮ್ಸ್ ಆಂಡರ್ಸನ್ ಹಾಗೂ ಬ್ಯಾಟ್ಸ್ಮನ್ ಜೋನಾಥನ್ ಟ್ರಾಟ್ಗೆ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.
ಈ ಇಬ್ಬರು ಆಟಗಾರರ ಬದಲಿಗೆ ಆಲ್ರೌಂಡರ್ ಕ್ರಿಸ್ ವೋಕಸ್ ಹಾಗೂ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಮೊಟ್ಟ ಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ನಾಲ್ಕನೆ ಟೆಸ್ಟ್ ಪಂದ್ಯದಲ್ಲಿ ಮಿಂಚಿರುವ ಜೋಯ್ ರೂಟ್ರನ್ನು ಪುಣೆಯಲ್ಲಿ ನಡೆಯಲಿರುವ ಮೊದಲ ಟ್ವೆಂಟಿ-20 ಪಂದ್ಯಕ್ಕೆ ಸೇರ್ಪಡೆಗೊಳಿಸಲಾಗಿದೆ
ಡಿ.20 ರಂದು ಪುಣೆಯಲ್ಲಿ ಮೊದಲ ಟಿ20, ಡಿ.22 ರಂದು ಮುಂಬೈನಲ್ಲಿ ಎರಡನೇ ಟಿ20 ಪಂದ್ಯ ನಿಗದಿಯಾಗಿದೆ.
ಟಿ20 ಪಂದ್ಯಕ್ಕೆ ತಂಡ: ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್) ಗೌತಮ್ ಗಂಭೀರ್, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ, ಯುವರಾಜ್ ಸಿಂಗ್, ಮನೋಜ್ ತಿವಾರಿ, ಆರ್ ಅಶ್ವಿನ್, ರವೀಂದ್ರ ಜಡೇಜಾ, ಪಿಯೂಶ್ ಚಾವ್ಲಾ, ಅಶೋಕ್ ದಿಂಡಾ, ಭುವನೇಶ್ವರ್ ಕುಮಾರ್, ಅಭಿಮನ್ಯು ಮಿಥುನ್, ಪರ್ವೀಂದರ್ ಅವಾನಾ
ನಂತರ, ಪ್ರವಾಸಿ ಪಾಕಿಸ್ತಾನ ತಂಡ 3 ಏಕದಿನ ಪಂದ್ಯ ಹಾಗೂ 2 ಟಿ20 ಪಂದ್ಯಗಳನ್ನು ಆಡಲಿದೆ. ಪಾಕಿಸ್ತಾನ ತಂಡ ಡಿ.22 ರಂದು ಭಾರತಕ್ಕೆ ಆಗಮಿಸಲಿದ್ದು, ಡಿ.25 ರಂದು ಮೊದಲ ಪಂದ್ಯವಾಡಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಟಿ20 ಆಯೋಜಿಸಲಾಗಿದೆ. ಡಿ.27 ರಂದು ಅಹಮದಾಬಾದಿನಲ್ಲಿ ಎರಡನೇ ಟಿ20 ಪಂದ್ಯ ನಡೆಯಲಿದೆ. ಮೂರು ಏಕದಿನ ಪಂದ್ಯಗಳು ಚೆನ್ನೈ, ಕೋಲ್ಕತ್ತಾ ಹಾಗೂ ದೆಹಲಿಯಲ್ಲಿ ನಡೆಯಲಿದ್ದು, ಜನವರಿ 7ಕ್ಕೆ ಪಾಕಿಸ್ತಾನ ತಂಡ ಭಾರತ ತೊರೆಯಲಿದೆ











